ಕಳೆದ ನಾಲ್ಕು ವರ್ಷಗಳಿಂದೀಚೆಗೆ ದೇಶದ ಹಲವಾರು ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ಧರ್ಮ, ಜಾತಿ,ಒಳ ಜಾತಿ ರಾಜಕೀಯ ನಡೆಸಿ ಒಂದಷ್ಟು ಯಶಸ್ಸು ಕಂಡಿರುವ ಅಮಿತ್ ಶಾ ಇದೇ ರೀತಿ ಕರ್ನಾಟಕದಲ್ಲೂ ಜಾತಿ ಸಮೀಕರಣ ಮಾಡಿ ಬಿಜೆಪಿಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿ ಮಾಡಲು ಮುಂದಾಗಿದ್ದರು.ಇದರ ಭಾಗವಾಗಿ ಮೊದಲಿಗೆ ಮಠಕ್ಕೆ ಭೇಟಿ ನೀಡಿದಾಗ ಅಮಿತ್ ಶಾ ನಿರ್ಮಾಲನಂದ ಸ್ವಾಮೀಜಿಗಳ ಮುಂದೆಯೇ ಕಾಲ ಮೇಲೆ ಕಾಲು ಹಾಕಿ ಕುಳಿತು ಮಾತನಾಡಿದ ಚಿತ್ರಗಳು ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಸದ್ದೇ ಮಾಡಿತ್ತು.ಮಠದ ಭಕ್ತರು ಸೇರಿದಂತೆ ಎಲ್ಲಾ ಕನ್ನಡಿಗರು ಅಮಿತ್ ಶಾ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದ್ದರು.ಆದರೆ ವಿವಾದಗಳಿಂದ ದೂರವಿರುವ ಶ್ರೀ ಮಠ ಅವರನ್ನು ಕ್ಷಮಿಸುವ ಮೂಲಕ ತನ್ನ ದೊಡ್ಡತನ ಮೆರೆದಿತ್ತು ಈ ಕಾರಣದಿಂದಾಗಿ ಅಮಿತ್ ಶಾ ಅಂದು ರಾಜ್ಯದ ಜನರ ಕೆಂಗಣ್ಣಿನಿಂದ ಪಾರಾಗಿದ್ದರು.ಈ ಮೊದಲೇ ಒಂದು ಸಾರಿ ,ಕನ್ನಡ ಬಾವುಟದ ಬದಲು ಮನೆ ಮನೆಗಳಲ್ಲಿ ಬಿಜೆಪಿ ಬಾವುಟ ಹಾರಬೇಕು ಎನ್ನುವ ಹೇಳಿಕೆ ನೀಡಿದ್ದಾರೆ ಎಂದು ಜಾಲತಾಣದ ಪತ್ರಿಕೆಯೊಂದರಲ್ಲಿ ಅಮಿತ್ ಶಾ ವಿರುದ್ಧ ಸುದ್ದಿ ಪ್ರಕಟವಾಗಿ ಇಡೀ ಕರ್ನಾಟಕವೇ ಅಮಿತ್ ಶಾ ವಿರುದ್ಧ ಆಕ್ರೋಶ ಹೊರಹಾಕಿತ್ತು.
ಎರಡು ಬಾರಿ ಕನ್ನಡಿಗರಿಂದ ಏಟು ತಿಂದಿದ್ದ ಅಮಿತ್ ಶಾ ಈ ಬಾರಿ ಆದಿಚುಂಚನಗಿರಿ ಮಠಕ್ಕೂ ಹಾಗೂ ನಾಥ ಪರಂಪರೆಯ ಯೋಗಿ ಆದಿತ್ಯನಾಥರಿಗೂ ಹತ್ತಿರದ ಸಂಬಂಧವಿರುವ ವಿಚಾರವನ್ನು ತಿಳಿದು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ತಂತ್ರಗಾರಿಕೆ ಮಾಡಿದ್ದರು.ಇದರ ಭಾಗವಾಗಿ ಯೋಗಿ ಆದಿತ್ಯನಾಥರು ಮಠಕ್ಕೆ ಭೇಟಿ ನೀಡಿದ್ದರು.ನಿರ್ಮಲಾನಂದ ಶ್ರೀಗಳು ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಮಾತುಕತೆಯನ್ನು ಸಹಾ ನಡೆಸಿದ್ದರು.ನಿರೀಕ್ಷೆಯಂತೆ ಆದಿತ್ಯನಾಥರು ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಶ್ರೀ ಮಠ ಬೆಂಬಲಿಸಬೇಕೆನ್ನುವ ರೀತಿಯಲ್ಲಿ ಅರ್ಥ ಬರುವ ಮಾತುಗಳನ್ನು ಶುರು ಮಾಡಿದ್ದರು.ಆದರೆ ರಾಜಕೀಯದಿಂದ ದೂರವಿರುವ ನಿರ್ಮಲನಂದ ಶ್ರೀ ಗಳು ಯಡಿಯೂರಪ್ಪನವರ ಮೇಲೆ ಸಾಕಷ್ಟು ಗೌರವವಿದೆ, ಕುಮಾರಸ್ವಾಮಿಗಳ ಬಗ್ಗೆ ಭರವಸೆ ಇದೆ ಅಂತ ಸೂಚ್ಯವಾಗಿ ಮಾತನಾಡಿ ತದ ನಂತರ ಆಧ್ಯಾತ್ಮದ ವಿಚಾರವಾಗಿ ಮಾತುಗಳನ್ನು ಮುಂದುವರೆಸಿದರು ಜೊತೆಗೆ ಯೋಗಿ ಆದಿತ್ಯನಾಥರ ಗುರುಗಳು ಇಲ್ಲಿನ ಆದಿಚುಂಚನಗಿರಿಯ ಬೆಟ್ಟದಲ್ಲಿ ತಪ್ಪಸ್ಸು ಮಾಡುತ್ತಿದ್ದ ಬಗ್ಗೆ ಹಾಗೂ ಇನ್ನಿತರ ಮಠಕ್ಕೆ ಸಂಬಂಧಿಸಿದ ಮಾತುಕತೆಗಳು ಸಹಾ ನಡೆಯಿತು.ಆದರೆ ರಾಜಕೀಯ ವಿಚಾರದಲ್ಲಿ ಆದಿಚುಂಚನಗಿರಿಯ ನಿಲುವು ಅದಾಗಲೇ ಯೋಗಿ ಆದಿತ್ಯನಾಥರಿಗೆ ಅರ್ಥವಾಗಿದ್ದ ಕಾರಣ ಮತ್ತೆ ಅದರ ಕುರಿತು ಪ್ರಸ್ತಾಪ ಮಾಡಲೇ ಇಲ್ಲ.
ಒಂದು ಏಟಿಗೆ ಎರಡು ಹಕ್ಕಿ ಹೊಡೆಯುವ ಅಮಿತ್ ಶಾ ತಂತ್ರ ಈ ಮೂಲಕ ಆದಿಚುಂಚನಗಿರಿ ಮಠದ ಆವರಣದಲ್ಲಿ ಮತ್ತೊಮ್ಮೆ ಬೋರಲಾಗಿ ಬಿದ್ದಿದೆ.